ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯ ಜುಲೈ 10 ರಿಂದ.
ಜುಲೈ 08, 2025
0
ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯ ಜುಲೈ 10 ರಿಂದ.
ಉಡುಪಿ: ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 21 ನೇ ವರ್ಷದ ಚಾತುರ್ಮಾಸ್ಯ ಜುಲೈ 10 ರಿಂದ ಸೆಪ್ಟಂಬರ್ 7 ರ ವರೆಗೆ ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ ನಡೆಯಲಿದೆ. ಜುಲೈ 10 ರಂದು ಪ್ರಾತಃ ಕಾಲ ಘಂಟೆ 5.00 ರಿಂದ: ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀ ವಿಶ್ವಕರ್ಮ ಯಜ್ಞ, ಚಾತುರ್ಮಾಸ್ಯ ವ್ರತ ಸಂಕಲ್ಪ ವಿಧಿ ಬಳಿಕ ಶ್ರೀಗುರುಪಾದುಕಾ ಪೂಜೆ ನಡೆಯಲಿದೆ
ಮಧ್ಯಾಹ್ನ 12.00 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಹಾಸಂಸ್ಥಾನದ ವ್ಯಾಪ್ತಿಯ 22 ದೇವಸ್ಥಾನಗಳ ಧರ್ಮದರ್ಶಿಗಳು ಭಾಗವಹಿಸುವರು. ಶ್ರೀಗಳವರ ಚಾತುರ್ಮಾಸ್ಯ ಕಾಲಾವಧಿಯಲ್ಲಿ ವೈದಿಕ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲಾ ಹಿರಿಯ ಮತ್ತು ಕಿರಿಯ ವೈದಿಕರು, ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘದವರು ನೇತೃತ್ವ ನೀಡಲಿದ್ದು, ಪಡುಕುತ್ಯಾರು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವರು. ಎರಡು ತಿಂಗಳ ಚಾತುರ್ಮಾಸ್ಯ ಕಾಲಾವಧಿಯನ್ನು ಮಹಾಸಂಸ್ಥಾನದ ವ್ಯಾಪ್ತಿಯ 22 ದೇವಸ್ಥಾನಗಳಿಗೆ ವಿಭಜಿಸಿ ನೀಡಲಾಗಿದೆ. ಈ ವೇಳೆಯಲ್ಲಿ ಗುರುಪಾದುಕಾಪೂಜೆ, ಆಹಾರವಿತರಣೆ, ಶುಚಿತ್ವ, ಸ್ವಯಂಸೇವಕ, ಕಚೇರಿ ಸೇರಿದ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯು ನಿಗದಿಪಡಿಸಲಾದ ದೇವಸ್ಥಾನಗಳಿಗಿರುತ್ತದೆ. ಜುಲೈ 22 ರಂದು ಗುರುಗಳ ಜನ್ಮ ವರ್ಧಂತಿಯಂದು ವರ್ಷಕ್ಕೆ ಒಂದು ಭಾರಿ ನಡೆಯುವ ಜಗದ್ಗುರುಗಳ ತುಲಾಭಾರ ಸೇವೆ ನಡೆಸಲು ಭಕ್ತಾದಿಗಳಿಗೆ ಅವಕಾಶವಿದೆ. ಗುರುಗಳ ಜನ್ಮವರ್ಧಂತಿಯಂದು ಸಮಾಜದ ಯುವಸಾಧಕರನ್ನು ಗೌರವಿಸಲಾಗುವುದು ಹಾಗೂ ಸಮಾಜದಲ್ಲಿ 95 ಶೇಕಡಾಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್. ಎಸ್. ಎಲ್. ಸಿ, ಪಿ.ಯು.ಸಿ ವಿಭಾಗದ ವಿದ್ಯಾರ್ಥಿಗಳನ್ನು, ಪದವಿ, ಸ್ನಾತಕೋತ್ತರ ಮತ್ತು , ಇಂಜಿನಿಯರಿಂಗ್, ವೈದ್ಯಕೀಯ ಪದವಿ, ಹಾಗೂ ಪಿ ಎಚ್ ಡಿ ಪದವಿ ಪಡೆದ ವಿದ್ಯಾರ್ಥಿಗಳನ್ನು ಅಬಿನಂದಿಸಲಾಗುವುದು. ಈ ಬಗ್ಗೆ ಸ್ವಾಗತ ಸಮಿತಿ ವಿಭಾಗದ ಶ್ರೀ ಹರೀಶ್ ಆಚಾರ್ಯ ಕಾರ್ಕಳ ( ಮೊ.9945867425 ) ಸಂಪರ್ಕಿಸಬಹುದಾಗಿದೆ.
ಜನ್ಮವರ್ಧಂತಿಯಂದು ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರು, ಅತಿಥಿಗಳು ಧರ್ಮಸಂಸತ್ತಿನಲ್ಲಿ ಭಾಗವಹಿಸುವರು ಆಗಸ್ಟ್ 10 ರಂದು ಶ್ರೀ ಸರಸ್ವತೀ ಮಾತೃಮಂಡಳಿ ವತಿಯಿಂದ ಮಾತೃವಂದನಾ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 24 ರಂದು ವಿದ್ಯಾರ್ಥಿ ಸಮಾವೇಶ ಹಾಗೂ ಗುರುಸೇವಾ ಪರಿಷತ್ತು ಪದಾಧಿಕಾರಿಗಳ ಸಮಾವೇಶ ಸಮಾಜದ ಪಂಚಶಿಲ್ಪಗಳ ಪ್ರಾಮುಖ್ಯತೆ ಹಾಗೂ ಅವುಗಳ ಯಾಂತ್ರೀಕರಣ ನಾವಿನ್ಯತೆ ಮತ್ತು ಸಾಧಕರ ಬಗ್ಗೆ ಯುವಜನರಿಗೆ ಜಾಗೃತಿ ಮೂಡಿಸುವುದು ಮತ್ತು ಯುವಜನರು ಸಮಾಜ ಸೇವೆಯಲ್ಲಿ ತೊಡಗಿಸಿಕ್ಕೊಳ್ಳುವ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ವಿಚಾರಗಳ ಬಗ್ಗೆ ಹಾಗೂ ಗುರುಸೇವಾ ಪರಿಷತ್ತಿನ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಮಾವೇಶ ನಡೆಯಲಿದೆ.
ಸೆಪ್ಟಂಬರ್ 5 ರ ಸೂರ್ಯೋದಯದಿಂದ 6 ರ ಸೂರ್ಯೋದಯದ ವರೆಗೆ ದ್ವಾದಶ ರಾಶಿ ಪೂಜೆ ಕಾರ್ಯಕ್ರಮವು ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘದ ನೇತೃತ್ವದಲ್ಲಿ ನಡೆಯಲಿದೆ. ಎಲ್ಲರ ಅರಿಷ್ಟ ನಿವಾರಣೆಗಾಗಿ ನಡೆಯುವ ಸೇವೆಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ತಾ.07.09.2025 ಭಾನುವಾರದಂದು ಸೀಮೋಲ್ಲಂಘನ, ಧಾರ್ಮಿಕ ಸಭೆ ಸಮಾರೋಪ ಸಮಾರಂಭ ಚಾತುರ್ಮಾಸ್ಯ ಸಮಾಪ್ತಿ ಗೊಳ್ಳಲಿದೆ.
ಪ್ತತೀ ದಿನ ದುರ್ಗಾ ನಮಸ್ಕಾರ ಫೂಜೆ: ಪ್ರತೀ ದಿನ ಬೆಳಗ್ಗೆ 8.00ಘಂಟೆಗೆ ಮತ್ತು ಸಂಜೆ 5.30ಘಂಟೆಗೆ ದುರ್ಗಾ ನಮಸ್ಕಾರ ಪೂಜೆ ವ್ಯವಸ್ಥೆ ಮಾಡಲಾಗುತ್ತದೆ.
ಪ್ರತೀ ದಿನ ಬೆಳಗ್ಗೆ 9 ಗಂಟೆಯಿಂದ 10 ಗಂಟೆ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ.
ಪ್ರತೀ ದಿನ ಮದ್ಯಾಹ್ನ ಗುರುಪಾದುಕಾ ಪೂಜೆಯ ಬಳಿಕ ಜಗದ್ಗುರುಗಳವರ ಆಶೀರ್ವಚನಕ್ಕಿಂತ ಮುಂಚಿತವಾಗಿ ಪಡುಕುತ್ಯಾರಿನ ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘ ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ವಿದ್ಯಾರ್ಥಿಗಳಿಂದ
ಉಪನ್ಯಾಸ ಮಾಲಿಕೆಯಿದೆ.
ಪ್ರತೀ ದಿನ ಅಪರಾಹ್ನ 2.30ಗಂಟೆಯಿಂದ 5.30ರ ವರೇಗೆ ವಿವಿಧ ದೇವಸ್ಥಾನಗಳವರಿಂದ ಸಾಂಸ್ಕೃತಿಕ ಸೇವಾ ಕಾರ್ಯಕ್ರಮಗಳು ನಡೆಯಲಿದೆ.
ಪ್ರತೀ ಮನೆಯಿಂದಲೂ ಗುರುಪಾದುಕಾ ಪೂಜೆ: ಈ ಬಾರಿಯ ಚಾತುರ್ಮಾಸ್ಯದ ಸಮಾಜದ ಪ್ರತೀ ಮನೆಯವರೂ ಕುಲಗುರುಗಳ ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚಾರ ನಡೆಸಲಾಗುತ್ತಿದೆ.. ಭಾನುವಾರ ಗುರುವಾರ ಸೇರಿದಂತೆ ಜನದಟ್ಟೆಣೆಯಿರುವ ದಿನಗಳಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಗ್ಗೆ 10ಘಂಟೆಯಿಂದ ವಿವಿಧ ಹಂತಗಳಲ್ಲಿ ಗುರುಪಾದುಕಾ ಪೂಜೆಯ ವ್ಯವಸ್ಥೆ ಮಾಡಲಾಗುತ್ತದೆ. ಗುರುಬಿಕ್ಷಾವಂದನೆ, ಸಂತರ್ಪಣೆ, ವಸ್ತ್ರದಾನ ಸೇರಿದಂತೆ ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಗುರುಪಾದುಕಾ ಪೂಜೆಯನ್ನು ನೇರವೇರಿಸಲು ಅವಕಾಶವಿದೆ
ವಿವಿಧ ಬಾಷೆಗಳಲ್ಲಿ ಆಮಂತ್ರಣ: ಸಮಾಜದ ಎಲ್ಲರಿಗೂ ಆಮಂತ್ರಣ ತಲುಪುವ ನಿಟ್ಟಿನಲ್ಲಿ ಕನ್ನಡ, ಮಲೆಯಾಳ, ತಮಿಳು, ತೆಲುಗು ಇಂಗ್ಲೀ಼ಷ್ ಮತ್ತು ಹಿಂದಿ ಭಾಷೆಗಳಲ್ಲಿ ಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗಿದೆ, ವಿವಿಧ ಸಮಾರಂಭಗಳ ಆಮಂತ್ರಣಗಳನ್ನು ಪ್ರತ್ಯೇಕವಾಗಿ ಮಾಡಲಾಗುವುದು. .
ಹಸಿರುವಾಣಿ ಹೊರೆಕಾಣಿಕೆ: ಚಾತುರ್ಮಾಸ್ಯದ ವೇಳೆ ದೇವಸ್ಥಾನ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಲ್ಲಿಕೆ ನಡೆಯಲಿದೆ.
ಚಾತುರ್ಮಾಸ್ಯ ವ್ರತಾಚರಣೆಯ ಸಂಪೂರ್ಣ ಯಶಸ್ವಿಗೆ ಸಮಸ್ತ ಹಿಂದೂ ಭಾಂಧವರ ಸಹಕಾರವನ್ನು ಕೋರುತ್ತೇವೆ.
ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೆರ ಹೋಬಳಿ,ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು,ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ,ಪದಾಧಿಕಾರಿಗಳಾದ ಗಣೇಶ್ ಆಚಾರ್ಯ ಕೆಮಣ್ಣು, ಜಿ ಟಿ ಆಚಾರ್ಯ ಮುಂಬೈ,ರತ್ನಾಕರ ಆಚಾರ್ಯ ಉದ್ಯಾವರ,ಜಯಕರ ಆಚಾರ್ಯ ಕರಂಬಳ್ಳಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ,ದೀಪಾ ಸುರೇಶ ಆಚಾರ್ಯ ಉಡುಪಿ
ಹಾಜರಿದ್ದರು.