ಕೇರಳದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತ - ಕಾಂಗ್ರೆಸ್.
ಜುಲೈ 06, 2025
0
ಕೇರಳದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತ - ಕಾಂಗ್ರೆಸ್.
ಮಂಜೇಶ್ವರ: ಕೇರಳದ ಎಡರಂಗ ಸರಕಾರದ ಅಂಧಾದರ್ಬಾರಿನ ದೆಸೆಯಿಂದ ಆರೋಗ್ಯ ಇಲಾಖೆಯು ಐಸಿಯುವಿನಲ್ಲಿ ಚಡಪಡಿಸುತ್ತಿರುವಂತೆ ಭಾಸವಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳಿಲ್ಲ, ವೈದ್ಯರಿದ್ದರೆ ಸಹಾಯಕ ಸಿಬ್ಬಂದಿಗಳಿಲ್ಲ, ಎಲ್ಲವೂ ಇದ್ದರೆ ಔಷಧಿಯಿಲ್ಲ. ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳಿಲ್ಲ, ರೇಬೀಸ್ ರೋಗಕ್ಕೆ ನೀಡಲಾಗುವ ಕನಿಷ್ಠ ಮಟ್ಟದ ಔಷಧಿಗಳ ಕಾರಣ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ, ಆಸ್ಪತ್ರೆಗಳಲ್ಲಿ ಡಾಕ್ಟರ್ ಗಳು ಹತ್ಯೆಗೀಡಾದ ದಾರುಣ ಘಟನೆಯೂ ನಡೆದಿವೆ. ವಿದ್ಯುತ್ ಸಂಪರ್ಕ ಕಡಿತವಾದಾಗ ಜನರೇಟರ್ ಇಲ್ಲದ ನಾಚಿಕೆಗೇಡಿನ ಪರಿಸ್ಥಿತಿ ಇದೆ. ಇವೆಲ್ಲಾ ಕೊರತೆಗಳ ನಡುವೆಯೂ ಎಡರಂಗ ಸರಕಾರದ ಸಮರ್ಥನಾ ಕೂಲಿಯಾಳುಗಳು ಆರೋಗ್ಯ ವಲಯದಲ್ಲಿ ಕೇರಳ ನಂಬರ್ ವನ್ ಎಂದು ಎಗ್ಗಿಲ್ಲದೆ ಹೇಳಿ ನಡೆಯುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳೂ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಈ ನಂಬರ್ ವನ್ ನಲ್ಲಿ ನಂಬಿಕೆ ಕಳೆದುಕೊಂಡು ವಿದೇಶಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಶಕಗಳ ಹಿಂದೆ ಉಪಯೋಗಶೂನ್ಯ ಎಂದು ಘೋಷಿಸಲ್ಪಟ್ಟ ಕೋಟ್ಟಯಂ ಮೆಡಿಕಲ್ ಕಾಲೇಜಿನ ಹಳೆಯ ಬ್ಲಾಕ್ ಕುಸಿದು ಬಿಂದು ಎಂಬ ಬಡಪಾಯಿ ಗೃಹಿಣಿ ಮೃತಪಟ್ಟಿದ್ದು, ಆರೋಗ್ಯ ಸಚಿವೆ ಶ್ರೀಮತಿ ವೀಣಾ ಜಾರ್ಜ್ ಈ ದುರ್ಘಟನೆಗೆ ನೇರ ಕಾರಣಕರ್ತರಾಗಿದ್ದಾರೆ. ಬೇಜವಾಬ್ದಾರಿ ಸಚಿವೆ ರಾಜೀನಾಮೆ ಆಗ್ರಹಿಸಿ ಮಂಜೇಶ್ವರ ಮತ್ತು ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಜುಲೈ ಎಂಟರಂದು ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾಂಗ್ರೆಸ್ ನ ಎಲ್ಲಾ ಹಂತಗಳ ನಾಯಕರು ಶ್ರಮಿಸಬೇಕೆಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ ಜೆ.ಎಸ್ ಕರೆ ನೀಡಿದ್ದಾರೆ. ಅವರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಭೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಮಾತನಾಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೇತಾರರಾದ ಉನೈಸ್ ಬೇಡಗಂ, ಉಮ್ಮರ್ ಬೋರ್ಕಳ, ಶಾಹುಲ್ ಹಮೀದ್ ಇಂಟಕ್, ಅಭಿಲಾಷ್ ಕೆ, ಚಂದ್ರಶೇಖರ ಶೆಟ್ಟಿ ಬೆಜ್ಜ, ಸತೀಶ್ ಅಡಪ್ಪ ಸಂಕಬೈಲ್, ಸತ್ಯನ್ ಉಪ್ಪಳ, ಮನ್ಸೂರ್ ಬಿ.ಎಂ, ಫ್ರಾನ್ಸಿಸ್ ಡಿ ಸೋಜಾ, ನಾಗೇಶ್ ಮಂಜೇಶ್ವರ, ಫಾರೂಕ್ ಶಿರಿಯ, ಹನೀಫ್ ಪಡಿಂಞಾರ್, ಬಾಬು ಬಂದ್ಯೋಡು, ಪುರುಷೋತ್ತಮ ಅರಿಬೈಲ್, ಗಣೇಶ್ ಪಾವೂರು, ಬರ್ನಾರ್ಡ್ ಡಿ ಅಲ್ಮೇಡಾ, ಅಜೀಜ್ ಕಲ್ಲೂರು, ಮೊಹಮ್ಮದ್ ಜೆ, ವಸಂತರಾಜ್ ಶೆಟ್ಟಿ, ಹುಸೈನ್ ಕುಬಣೂರ್, ಗೀತಾ ಬಂದ್ಯೋಡು, ಸೀತಾ ಡಿ, ರಂಜಿತ್ ಮಂಜೇಶ್ವರ, ಗಂಗಾಧರ ಪಡ್ಪಿನಕೆರೆ, ಪಿ ಎಂ ಖಾದರ್ ಹಾಜಿ, ನವೀನ್ ಕುಮಾರ್, ಉಮ್ಮರ್ ಬೆಜ್ಜ, ಬಾಸಿತ್ ತಲೆಕ್ಕಿ, ಸದಾಶಿವ ಕೆ, ಹಮೀದ್ ಕಣಿಯೂರು, ಮೊಹಮ್ಮದ್ ಎಸ್ ಎಂ, ಎ ಎಂ ಉಮ್ಮರ್ ಕುಂಞಿ, ಅಬ್ದುಲ್ ರಹಿಮಾನ್ ಹಾಜಿ, ಮಕ್ಬೂಲ್ ಅಹ್ಮದ್, ಮುಂತಾದವರು ಉಪಸ್ಥಿತರಿದ್ದರು.
ಜವಹರ್ ಬಾಲ ಮಂಚ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಭಿಲಾಷ್ ಹಾಗೂ ಸಂಸ್ಕಾರ ಸಾಹಿತಿ ಮಂಡಲ ಕನ್ವೀನರ್ ಶ್ರೀ ಹುಸೈನ್ ಕುಬಣೂರುರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಶ್ರೀ ದಿವಾಕರ್ ಎಸ್.ಜೆ ಸ್ವಾಗತಿಸಿ, ಶ್ರೀ ಮುಹಮ್ಮದ್ ಸೀಗಂಡಡಿ ವಂದಿಸಿದರು.