ಮಂಜೇಶ್ವರದ ಹುಲಿವೇಷದಲ್ಲಿ ಖ್ಯಾತ ಚಿತ್ರ ಕಲಾವಿದ ಆರ್ಟಿಸ್ಟ್ ಶರತ್ ಕೊಡ್ಡೆಯವರ ಕರದಲ್ಲಿ ಮೂಡಿತು ರತನ್ ಟಾಟಾ, ಈಶ್ವರ್ ಮಲ್ಪೆ ಚಿತ್ರ.
ಅಕ್ಟೋಬರ್ 12, 2024
0
ಮಂಜೇಶ್ವರದ ಹುಲಿವೇಷದಲ್ಲಿ ಖ್ಯಾತ ಚಿತ್ರ ಕಲಾವಿದ ಆರ್ಟಿಸ್ಟ್ ಶರತ್ ಕೊಡ್ಡೆಯವರ ಕರದಲ್ಲಿ ಮೂಡಿತು ರತನ್ ಟಾಟಾ, ಈಶ್ವರ್ ಮಲ್ಪೆ ಚಿತ್ರ
ಮಂಜೇಶ್ವರ: ನವರಾತ್ರಿ ಮಹೋತ್ಸವದ ವಿಜಯ ದಶಮಿಯ ದಿನವಾದ ಇಂದು ಮಂಜೇಶ್ವರ ಬಳಿಯ ತೂಮಿನಾಡು ಶ್ರೀ ಮಹಾಕಾಳಿ ಕ್ರೀಡಾ ಬಳಗದ ಹುಲಿ ವೇಷ ತಂಡದಲ್ಲಿ ಸುಧೀಸ್ ತೂಮಿನಾಡು ಎಂಬವರು ತನ್ನ ದೇಹದಲ್ಲಿ ಇತ್ತೀಚೆಗೆ ನಿಧನರಾದ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ರವರ ಚಿತ್ರ ಮತ್ತು ಬೆನ್ನಿನಲ್ಲಿ ಸಮಾಜ ಸೇವಕ, ಮುಳುಗು ತಜ್ಞ ಈಶ್ವರ ಮಲ್ಪೆಯವರ ಚಿತ್ರವನ್ನು ಬಿಡಿಸಿ ಇಬ್ಬರ ಸೇವಾ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ. ಈ ಚಿತ್ರವನ್ನು ಖ್ಯಾತ ಕಲಾವಿದ ಆರ್ಟಿಸ್ಟ್ ಶರತ್ ಕೊಡ್ಡೆ ಚಿತ್ರಿಸಿದ್ದಾರೆ. ಸುಧೀಸ್ ರವರು ಶಾಲಾ, ಕಾಲೇಜು ಕಲಿಯುವ ಸಮಯದಲ್ಲೇ ಹುಲಿವೇಷವನ್ನ ಹಾಕುತ್ತಾ ದೇವರ ಸೇವೆ ಸಲ್ಲಿಸುತ್ತಿದ್ದು, ಕಳೆದ ಹಲವು ವರ್ಷಗಳಿಂದ ಹುಲಿವೇಷ ಹಾಕುವ ವೇಳೆ ದೇಶದ ಹೋರಾಟಗಾರರು ಹಾಗೂ ವಿವಿಧ ಸೇವೆಗಳನ್ನು ಸಲ್ಲಿಸುವ ಸಾಮಾಜಿಕ ಕಾರ್ಯಕರ್ತರ ಚಿತ್ರಗಳನ್ನು ತನ್ನ ದೇಹದಲ್ಲಿ ಬಿಡಿಸಿ ಅವರ ಕಾರ್ಯಕ್ಕೆ ಬೆಂಬಲವನ್ನು ಮತ್ತು ಅವರನ್ನ ನೆನಪಿಸುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪದವಿ ವಿದ್ಯಾಭ್ಯಾಸ ಪೂರೈಸಿ, ಕಾಸರಗೋಡಿನಲ್ಲಿ ಲಾಟರಿ ಮಾರಾಟದ ವೃತಿಯಲ್ಲಿ ತೊಡಗಿರುವ ಸುಧೀಸ್, ತೂಮಿನಾಡು ನಿವಾಸಿ ಎಲೆಕ್ಟ್ರಿಷಿಯನ್ ಗಣೇಶ್ - ಸಾಮಾಜಿಕ ಕಾರ್ಯಕರ್ತೆ ಜಯಂತಿ ದಂಪತಿಗಳ ಪುತ್ರನಾಗಿದ್ದಾನೆ. ತಾನು ದೇಶದ ಯೋಧನಾಗಬೇಕು ಎಂಬ ಹೆಬ್ಬಯಕೆ ಈತನದ್ದು. ಅದಕ್ಕಾಗಿ ಕಳೆದ ಹಲವು ವರ್ಷಗಳಿಂದ ಸೇನೆಯ ವಿವಿಧ ತರಗತಿಗಳಲ್ಲಿ ಭಾಗಿಯಾಗಿದ್ದಾನೆ.ಕಳೆದ ವರ್ಷ ಸುಧೀಸ್ ರವರು ಮೇಜರ್ ಸಂದೀಪ್ ಉನ್ನಿಕೃಷ್ಣನ್ ರ ಚಿತ್ರವನ್ನು ಆರ್ಟಿಸ್ಟ್ ಶರತ್ ಕೊಡ್ಡೆಯವರ ಕರದಲ್ಲಿ, ಕಲಾತ್ಮಕತೆಯಲ್ಲಿ ತನ್ನ ದೇಹದಲ್ಲಿ ಬಿಡಿಸಿ ಅವರನ್ನು ಕೂಡಾ ಸ್ಮರಿಸಿದ್ದಲ್ಲದ್ದೆ, ಜನ ಮಾನಸದಲ್ಲಿ ಮೆಚ್ಚುಗೆಗಳಿಸಿದ್ದರು.