ಮಂಜೇಶ್ವರ ಜಿ.ಡಬ್ಲ್ಯೂ.ಎಲ್. ಪಿ. ಎಸ್ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಲಾ ಅಡುಗೆ ಅಮ್ಮನವರ ಅಡುಗೆ ಸ್ಪರ್ಧೆ.
ಅಕ್ಟೋಬರ್ 27, 2024
0
ಮಂಜೇಶ್ವರ ಜಿ.ಡಬ್ಲ್ಯೂ.ಎಲ್. ಪಿ. ಎಸ್ ಶಾಲೆಯಲ್ಲಿ
ಮಂಜೇಶ್ವರ ಉಪಜಿಲ್ಲಾ ಶಾಲಾ ಅಡುಗೆ ಅಮ್ಮನವರ ಅಡುಗೆ ಸ್ಪರ್ಧೆ.
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಅಡುಗೆ ಸ್ಪರ್ಧೆಯು ಜಿ. ಡಬ್ಲ್ಯೂ. ಎಲ್. ಪಿ. ಮಂಜೇಶ್ವರ ಶಾಲೆಯಲ್ಲಿ ವಿಜೃಂಭಣೆಯಿಂದ ಜರಗಿತು. ಉದ್ಘಾಟನಾ ಸಮಾರಂಭದಲ್ಲಿ ಅಡುಗೆ ಸ್ಪರ್ಧೆಯನ್ನು ಕೇರಳ ಸರಕಾರದ ಪ್ರತಿಷ್ಟಿತ ಕೇರಳ ತುಳು ಅಕಾಡೆಮಿಯ ಅಧ್ಯಕ್ಷರಾದ ಕೆ.ಆರ್. ಜಯಾನಂದರವರು ಗ್ಯಾಸ್ ಒಲೆಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಾಲೆಯ ದೈನಂದಿನ ಅಡುಗೆ ಕಾರ್ಯಕ್ರಮದಲ್ಲಿ ಅಡುಗೆ ಅಮ್ಮನವರ ಪಾತ್ರ ಮಹತ್ತರವಾಗಿದೆ ಎಂದರು. ಶಾಲೆಯಲ್ಲಿ ಶುಚಿ ರುಚಿಯಾದ ಅಡುಗೆಯನ್ನು ಮಾಡುವ ಮೂಲಕ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು ಎಂದು ಕರೆಕೊಟ್ಟರು. ಆದಷ್ಟು ತರಕಾರಿಗಳನ್ನು ನಮ್ಮ ಹಿತ್ತಲಿನಲ್ಲೇ ಬೆಳೆಸುವ ಮೂಲಕ ನಮ್ಮ ಮುಂದಿನ ಪೀಳಿಗೆಯ ಆರೋಗ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಕೂಡ ನಮಗಿದೆ ಎಂದರು. ಮುಂದೆ ಅಡುಗೆ ಸ್ಪರ್ಧೆಗಳನ್ನು ಆಯೋಜಿಸುವಾಗ ಅತಿ ಹೆಚ್ಚು ಸ್ಪರ್ದಾಳುಗಳು ಭಾಗವಹಿಸುವಂತೆಯೂ ಮಾಡಬೇಕು ಎಂದರು. ಉಪಜಿಲ್ಲೆಯ ಎಲ್ಲಾ ಅಡುಗೆಯವರು ಕೂಡ ಭಾಗವಹಿಸುವಂತೆ ಮಾಡಿದಲ್ಲಿ ಅವರಿಗೆ ಅತ್ಯುತ್ತಮವಾದ ಮಾಹಿತಿಯನ್ನು ನೀಡಲು ಸಾಧ್ಯವಾಗುತ್ತದೆ ಎಂದರು. ಅಡುಗೆ ಸಾಮಾಗ್ರಿಗಳನ್ನು , ತರಕಾರಿಗಳನ್ನು, ಅಕ್ಕಿಯನ್ನು ಹೆಚ್ಚು ತೊಳೆದು ಉಪಯೋಗಿಸಿದಲ್ಲಿ ನಮ್ಮ ಆರೋಗ್ಯದ ಹಿತವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದರು. ಒಟ್ಟಾರೆಯಾಗಿ ಒಂದು ಸುಂದರ, ಸ್ವಾಸ್ಥ್ಯ ಸಮಾಜವನ್ನು ರೂಪಿಸುವಲ್ಲಿ ಶಾಲೆಗಳ ಅಡುಗೆ ಅಮ್ಮನವರ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಜಿ. ಡಬ್ಲ್ಯೂ. ಎಲ್.ಪಿ.ಎಸ್ ಮಂಜೇಶ್ವರ ಶಾಲೆಯ ಮುಖ್ಯೋಪಾಧ್ಯಾಯ ಸುಕೇಶ್.ಎ. ಸ್ವಾಗತಿಸಿ, ಮುಖ್ಯೋಪಾಧ್ಯಾಯರುಗಳಾದ ಸುಬ್ರಹ್ಮಣ್ಯ ಕೆ, ಶ್ರೀಮತಿ ಸವಿತಾ ಟೀಚರ್, ಶ್ರೀಮತಿ ಫಾತಿಮಾತ್ ಝವುರ ಅಡುಗೆ ಪರಿಣಿತರಾದ ಪ್ರಕಾಶ್ ಹೊಳ್ಳ , ಮಂಜೇಶ್ವರ ಉಪಜಿಲ್ಲಾ ನೂನ್ ಮಿಲ್ ಆಫೀಸರ್ ಪ್ರದೀಪ್ ಕುಮಾರ್ .ಬಿ. ಉಪಸ್ಥಿತರಿದ್ದರು. ಅಧ್ಯಾಪಕರಾದ ಅಬ್ದುಲ್ ಜಬ್ಬಾರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು. ಬಳಿಕ ಸ್ಪರ್ಧಿಗಳಿಂದ ಅಡುಗೆ ತಯಾರಿಸುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನ್ ಲವೀನಾ ಮೊಂತೆರೊ ರವರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಡುಗೆ ಅಮ್ಮನವರಿಗಾಗಿ ಸರಕಾರ ಆಯೋಜಿಸಿದಂತಹ ಈ ಪ್ರತ್ಯೇಕ ಅಡುಗೆ ಸ್ಪರ್ಧೆಯು ನಿಜವಾಗಿಯೂ ಶ್ಲಾಘನೀಯವಾದದ್ದು ಎಂದರು. ಪ್ರತಿದಿನವೂ ನೂರಾರು ಮಕ್ಕಳಿಗೆ ಅನ್ನವನ್ನು ಬೇಯಿಸಿ ಶುಚಿ ರುಚಿಯಾದ ಮಧ್ಯಾಹ್ನದ ಬಿಸಿ ಊಟವನ್ನು ಕೊಡುವಂತಹ ಅಡುಗೆ ಅಮ್ಮನವರ ಕೆಲಸ ಅವಿಸ್ಮರಣೀಯ ಎಂದರು. ಈ ನಿಟ್ಟಿನಲ್ಲಿ ನೀವೆಲ್ಲರೂ ಕೂಡ ಅಭಿನಂದನರ್ಹರು ಎಂದರು. ಅಡುಗೆಯಲ್ಲಿ ಪ್ರತ್ಯೇಕವಾಗಿ ಜಾಗರೂಕತೆಯನ್ನು ವಹಿಸಿಕೊಂಡು ಮಕ್ಕಳ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು. ಸಮಾರೋಪ ಸಮಾರಂಭದ ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾದ ರಾಜಗೋಪಾಲ. ಕೆ. ಯವರು ಎಲ್ಲರೂ ಕೂಡ ಅತ್ಯುತ್ತಮವಾಗಿ ಅಡುಗೆಯನ್ನು ಮಾಡಿದ್ದೀರಿ. ಎಲ್ಲರೂ ಕೂಡ ಪ್ರಥಮ ಸ್ಥಾನಕ್ಕೆ ಅರ್ಹರು. ನಿಯಮದ ಪ್ರಕಾರ ಒಬ್ಬರನ್ನ ಆಯ್ಕೆ ಮಾಡಬೇಕಾಗಿದೆ. ಯಾರೂ ಕೂಡ ಬೇಸರಿಸಬೇಡಿ ಎಂದರು. ಶಾಲೆಗಳಲ್ಲಿ ಬಿಸಿಯೂಟವನ್ನು ಬೇಯಿಸುವ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರಬೇಕು. ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಕಿವಿ ಮಾತನ್ನು ಹೇಳಿದರು. ಮುಖ್ಯ ಅತಿಥಿ ಮಂಜೇಶ್ವರ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಸಾಧನ್ ಟಿ. ಕೆ. ರವರು ಮಾತನಾಡುತ್ತಾ ಇದೊಂದು ವಿಶೇಷ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಅಡುಗೆ ಅಮ್ಮನವರನ್ನು ನೋಡುವಾಗ ನಿಜವಾಗಿಯೂ ಸಂತಸವಾಗುತ್ತದೆ. ನಿಜವಾಗಿಯೂ ವರ್ಷವಿಡೀ ಮಕ್ಕಳಿಗೆ ಯಾವುದೇ ಕೊರತೆ ಬಾರದಂತೆ ಊಟ ಮಾಡಿಕೊಡುವ ನೀವೆಲ್ಲರೂ ಕೂಡ ಶ್ಲಾಘನೀಯರು ಎಂದರು. ತನ್ನ ಕರ್ತವ್ಯದ ದಿನಗಳಲ್ಲಿ ಮಧ್ಯಾಹ್ನ ಹಸಿದಾಗ ಊಟ ಕೊಟ್ಟಂತಹ ಕೆಲವು ಘಟನೆಗಳನ್ನು ನೆನಪಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ವಿಧದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರುಗಳಾದ ಶಂಕರನಾರಾಯಣ ಭಟ್, ಸುಬ್ರಹ್ಮಣ್ಯ.ಕೆ, ಶಾಲೆಯ ಎಂ. ಪಿ ಟಿ. ಎ. ಅಧ್ಯಕ್ಷರಾದ ಶ್ರೀಮತಿ ರೈನಾಜ್, ಖ್ಯಾತ ಪಾಕಶಾಸ್ತ್ರಜ್ಞರಾದ ಪ್ರಕಾಶ್ ಹೊಳ್ಳ ಮೀಯಪದವು ಉಪಸ್ಥಿತರಿದ್ದು, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮೊದಲಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಸುಕೇಶ ಎ. ಯವರು ಸ್ವಾಗತಿಸಿ, ಮಂಜೇಶ್ವರ ನೂನ್ ಮೀಲ್ ಆಫೀಸರ್ ಪ್ರದೀಪ್ ಕುಮಾರ್. ಬಿ. ಧನ್ಯವಾದ ಸಮರ್ಪಣೆ ಮಾಡಿದರು. ಶಾಲಾ ಅಧ್ಯಾಪಕರಾದ ಅಬ್ದುಲ್ ಜಬ್ಬಾ ರ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯು ಕೂಡ ಜರಗಿತು. ಅಡುಗೆ ಸ್ಪರ್ಧೆಯಲ್ಲಿ ಜಿ. ಡಬ್ಲ್ಯೂ ಎಲ್. ಪಿ. ಎಸ್. ಮಂಜೇಶ್ವರ ಶಾಲೆಯ ಅಡುಗೆ ಅಮ್ಮನವರಾದ ಶ್ರೀಮತಿ ಭಾನುಮತಿ ಪ್ರಥಮ ಸ್ಥಾನ, ಎಸ್. ಎಸ್. ಬಿ ಎ. ಯು. ಪಿ. ಐಲ ಶಾಲೆಯ ಶ್ರೀಮತಿ ಪುಷ್ಪ ದ್ವಿತೀಯ ಸ್ಥಾನ ಹಾಗೂ ಎಸ್.ಎ.ಟಿ.ಎಚ್. ಎಸ್. ಮಂಜೇಶ್ವರ ಶಾಲೆಯ ಶ್ರೀಮತಿ ಶೈಲಜಾ ಪ್ರಕಾಶ್ ತೃತೀಯ ಸ್ಥಾನವನ್ನು ಪಡೆದರು. ಸ್ಪರ್ಧಾ ವಿಜೇತರಿಗೆ ಹಾಗೂ ಬಂದ ಎಲ್ಲಾ ಅಡುಗೆ ಅಮ್ಮನವರಿಗೂ ಸರ್ಟಿಫಿಕೇಟ್ ನ್ನು ವಿತರಿಸಲಾಯಿತು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.