ಮಂಜೇಶ್ವರ ಪರಿಸರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ. ಮನೆ, ಮಸೀದಿ, ವ್ಯಾಪಾರ ಸಂಸ್ಥೆ, ಕ್ಲಬ್ ಗಳು ಜಲಾವೃತ.
ಮೇ 30, 2025
0
ಮಂಜೇಶ್ವರ ಪರಿಸರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ. ಮನೆ, ಮಸೀದಿ, ವ್ಯಾಪಾರ ಸಂಸ್ಥೆ, ಕ್ಲಬ್ ಗಳು ಜಲಾವೃತ.
ಮಂಜೇಶ್ವರ: ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂಜೇಶ್ವರ ತಾಲೂಕಿನ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಮನೆ, ಅಂಗಡಿ, ಕ್ಲಬ್, ದೇವಾಲಯ ಗಳಿಗೂ ನೀರು ನುಗ್ಗಿದ್ದು, ಕೆಲವೊಂದು ಕಡೆಗಳಲ್ಲಿ ಅಪಾಯವನ್ನುoಟುಮಾಡಿದೆ. ಮಂಜೇಶ್ವರ ಹೊಸಬೆಟ್ಟು ಪೆಟ್ರೋಲ್ ಪಂಪ್ ಬಳಿಯ ನಿವಾಸಿಗಳಾದ ಸುನಿಲ್ ಶೆಟ್ಟಿ, ಉಮೇಶ್ ಶೆಟ್ಟಿ, ಮಹಾಬಲ ಶೆಟ್ಟಿ, ವಿಜು ವರ್ಗಿಸ್ ಎಂಬವರ ಮನೆ ಪರಿಸರ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿಂದ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹಳಿ ಅಡಿಭಾಗದಿಂದಾಗಿ, ಮಂಜೇಶ್ವರ ಸುರಂತೋಡುಗೆ ಸಂಪರ್ಕವಿರುವ ಕಾಲುವೆಯಲ್ಲಿ ಕಸ ಕಡ್ಡಿಗಳು ತುಂಬಿದ ಕಾರಣ ನೀರು ಸಾಗದೆ ಪರಿಸರ ಪ್ರದೇಶದಲ್ಲಿ ನೀರು ಕಟ್ಟಿ ನಿಂತಿದೆ. ಪೋಸೋಟುನಲ್ಲಿ ಕನಿಲ ಹೊಳೆಯು ತುಂಬಿ ಹರಿಯುವ ಕಾರಣ ಹೊಳೆ ಪರಿಸರದ ಮನೆಗಳು, ಮಲ್ಹರ್ ಮಸೀದಿ, ಶಿಕ್ಷಣ ಸಂಸ್ಥೆ, ಸಭಾಂಗಣ ಪ್ರದೇಶ ನೀರಿನಿಂದ ಜಲಾವೃತವಾಗಿದೆ. ಹೊಸಂಗಡಿ ಜಂಕ್ಷನ್ ನ ಎಂ. ಎಂ. ಪ್ಲಾಜ ಕಾಂಪ್ಲೆಕ್ಸ್ ನ ನೆಲ ಮಹಡಿಯ ಎಲ್ಲಾ ವ್ಯಾಪಾರ ಸಂಸ್ಥೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಾಶ ನಷ್ಟ ಉಂಟಾಗಿದೆ. ಮಜಿಬೈಲು, ಪಟ್ಟತ್ತೂರಿನಲ್ಲಿ ಮನೆಗಳಿಗೆ ಸಾಗಲು ಆಗದ ಕಾರಣ ವಾಹನಗಳನ್ನು ಬಯಲು ಬಳಿಯ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿತ್ತು. ನಿನ್ನೆ ರಾತ್ರಿ ತೀವ್ರ ಮಳೆಯ ಹಿನ್ನೆಲೆಯಲ್ಲಿ ಈ ರಸ್ತೆಯೇ ಕೊಚ್ಚಿ ಹೋಗಿದ್ದು ನಿಲ್ಲಿಸಿದ ವಾಹನಗಳು ಮಳೆ ನೀರಿನೊಂದಿಗೆ ಕೊಚ್ಚಿ ಹೋದ ಬಗ್ಗೆ ಇಂದು ಬೆಳಗ್ಗೆಯಷ್ಟೆ ಜನರ ಗಮನಕ್ಕೆ ಬಂದಿತ್ತು. ಅರ್ಪಿತ್ ಎಂಬವರ ಕಾರು ಬಯಲಿನಲ್ಲಿ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಇಲ್ಲಿನ ನಿವಾಸಿಗಳಾದ ಶಿವಪ್ರಸಾದ್, ವಿಕಿತ್ ಎಂಬಿವರ ದ್ವಿಚಕ್ರ ವಾಹನಗಳೂ ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರು ದೈವಗಳ ಕ್ಷೇತ್ರದ ಅಣ್ಣ ದೈವದ ಭಂಡಾರ ಮನೆ ಪರಿಸರವು ಹಾಗೂ ಪರಿಸರದ ಬಯಲುಗಳು, ತೋಡು, ಕೆರೆಗಳು ಜಲಾವೃತವಾಗಿದೆ. ಪರಿಸರದ ಹಲವು ಮನೆಗಳಿಗೆ ನೀರು ನುಗ್ಗಿದ ಕಾರಣ ಜನರನ್ನು ದೋಣಿಯ ಮೂಲಕ ಸ್ಥಳoತರಿಸಲಾಯಿತು. ಕಣ್ವತೀರ್ಥ ಆಂಜನೇಯ ಕ್ಲಬ್ ಪರಿಸರದ ರಸ್ತೆ ನೀರು ತುಂಬಿ ಸಂಚಾರ ಅಸ್ತವ್ಯಸ್ತವಾಗಿದೆ. ಮಂಜೇಶ್ವರ ರೈಲ್ವೆ ಸ್ಟೇಷನ್ ನ ಮೇಲ್ಸೇತುವೆ ಗೆ ತೆರಳುವ ರಸ್ತೆ ಜಲಾವೃತವಾಗಿದೆ.ಬಂಗ್ರ ಮಂಜೇಶ್ವರ ಪೋಯ್ಯಕಂಡ ನಿವಾಸಿ ಇಬ್ರಾಹಿಂ ಎಂಬವರ ಮನೆ ಪರಿಸರ ಕೂಡಾ ಜಲಾವೃತವಾಗಿದೆ. ಪಾವೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಬಳಿ ಹರಿಯುವ ಶ್ರೀ ಚಾಮುಂಡೇಶ್ವರಿ ನದಿಯು ತುಂಬಿ ಸೇತುವೆ ಮೇಲೆ ಹಾಗೂ ಕೆಲವು ಮನೆಗಳ ಒಳಗೆ ನುಗ್ಗಿದೆ. ಮಜಿಬೈಲ್ ನಿವಾಸಿ ಲೋಕನಾಥ ಶೆಟ್ಟಿ, ಸಂಜೀವ ಶೆಟ್ಟಿ, ನಾರಾಯಣ ಶೆಟ್ಟಿ ಎಂಬವರ ಮನೆ ಜಲಾವೃತ. ಮಳೆಯಿಂದಾಗಿ ಸಮುದ್ರ ರೀತಿಯಂತೆ ಕಾಣುವ ಪಾವೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಪ್ರದೇಶ.ಮಂಜೇಶ್ವರ, ಮೀoಜ, ವರ್ಕಾಡಿ ಭಾಗದಲ್ಲಿ ಅಬ್ಬರದ ಮಳೆಗೆ ಕೃಷಿ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ರೈತ ಬೆಳೆದ ಸಂಪೂರ್ಣ ಬೆಳೆ ಹಾನಿಯಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ವಿದ್ಯುತ್ ಸಂಪರ್ಕ ಕೂಡ ಖಡಿತಗೊಂಡಿದೆ.