ಉಕ್ಕಿ ಹರಿಯುವ ಶಿರಿಯ ನದಿ. ಪುರಾಣ ಪ್ರಸಿದ್ಧ ಸೀರೆ ಶ್ರೀ ಶಂಕರ ನಾರಾಯಣ ದೇವಸ್ಥಾನ ಜಲಾವೃತ.
ಜೂನ್ 16, 2025
0
ಉಕ್ಕಿ ಹರಿಯುವ ಶಿರಿಯ ನದಿ.
ಪುರಾಣ ಪ್ರಸಿದ್ಧ ಸೀರೆ ಶ್ರೀ ಶಂಕರ ನಾರಾಯಣ ದೇವಸ್ಥಾನ ಜಲಾವೃತ.
ಮಂಜೇಶ್ವರ: ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಂದ್ಯೋಡ್ ಬಳಿಯ ಶಿರಿಯ ನದಿ ಉಕ್ಕಿ ಹರಿಯುತ್ತಿದ್ದು, ಪರಿಸರದ ಎಲ್ಲಾ ಬಯಲು ಪ್ರದೇಶಗಳು ಸಂಪೂರ್ಣ ಜಾಲಾವೃತವಾಗಿದ್ದು, ನದಿಯಿಂದ ಸುಮಾರು 500 ಮೀಟರ್ ಅಂತರದಲ್ಲಿರುವ ಪುರಾಣ ಪ್ರಸಿದ್ಧ ಕ್ಷೇತ್ರವಾದ ಶಿರಿಯ ಸೀರೆ ಶ್ರೀ ಶಂಕರ ನಾರಾಯಣ ದೇವಸ್ಥಾನ ಜಲಾವೃತಗೊಂಡಿದೆ. ಸುಮಾರು 4 ಅಡಿಗಳಷ್ಟು ನೀರು ಕ್ಷೇತ್ರ ಪರಿಸರ ಸೇರಿದಂತೆ ಗರ್ಭಗುಡಿಯ ತನಕ ಸುತ್ತುರಿದಿದ್ದು, ಇಂದು ಸೋಮವಾರ ವಿಶೇಷ ಪೂಜೆ ಹಾಗೂ ಅನ್ನದಾನದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಕ್ಷೇತ್ರದೊಳಗೆ ತೆರಳಲು ಅಸಾಧ್ಯವಾಗಿದೆ. ಕ್ಷೇತ್ರದ ಪ್ರಧಾನ ಅರ್ಚಕರಾದ ಕಿರಣ್ ರಾವ್ ರವರು ನೀರಿನಲ್ಲಿ ತೆರಳಿ ಬೆಳಗ್ಗಿನ ಪೂಜೆಗಳನ್ನು ನೆರವೇರಿಸಿದ್ದಾರೆ. ಇವರ ಜೊತೆ ದೇವಸ್ಥಾನದ ಮೆನೇಜರ್ ಯೋಗೀಶ್ ಬಂದ್ಯೋಡ್ ತಮ್ಮ ಸೊಂಟದವರೆಗೆ ನೀರಿದ್ದರೂ, ಕ್ಷೇತ್ರದೊಳಗೆ ತೆರಳಿ ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ಬರುವ ಭಕ್ತರಿಗೆ ಕ್ಷೇತ್ರದೊಳಗೆ ತೆರಳಲು ಅನುಮತಿ ನೀಡಲಾಗುತ್ತಿದೆ. ಕ್ಷೇತ್ರ ಪರಿಸರವಿಡಿ ಜಾಲಾವೃತವಾಗಿದ್ದರಿಂದ ಮಹಿಳೆಯರಿಗೆ ತೆರಳಲು ಕಷ್ಟವಾಗುತ್ತಿದೆ. ಕ್ಷೇತ್ರದ ಪರಿಸರದಲ್ಲಿರುವ ತೋಡುಗಳು ಇತ್ತೀಚೆಗೆ ಮನೆ ನಿರ್ಮಾಣಗಳ ವೇಳೆ ಕಸಕಡ್ಡಿಗಳಿಂದ ಹಾಗೂ ಮಣ್ಣುಗಳನ್ನು ತುಂಬಿಸಿ ತಡೆಯುಂಟಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರಿಂದ ತೋಡಿನ ಮೂಲಕ ಹರಿಯುವ ನೀರು ಪರಿಸರದಲ್ಲಿ ಕಟ್ಟಿ ನಿಲ್ಲುತ್ತದೆ. ತಗ್ಗು ಪ್ರದೇಶ ಜೊತೆ ಗದ್ದೆಗಳಿಂದ ಕೂಡಿದ ಕಾರಣ ತುಂಬಿ ಹರಿವ ಹೊಳೆ ನೀರು ಕಳೆದೆರಡು ವರ್ಷದಿಂದ ನೇರವಾಗಿ ಇಲ್ಲಿಗೆ ಪ್ರವೇಶಿಸುತ್ತದೆ ಎಂಬುದಾಗಿ ಪರಿಸರದವರ ಅಭಿಪ್ರಾಯವಾಗಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್ ನ 14 ನೇ ವಾರ್ಡ್ ಆಗಿರುವ ಈ ಪ್ರದೇಶದಲ್ಲಿ ನೀರು ಹರಿಯಲು ತೋಡುಗಳು ಇದ್ದರೂ ಸಂಪರ್ಕ ಕಡಿತಗೊಳಿಸಿದ್ದಾರೆ ಎಂಬ ಆರೋಪವಿದೆ.