ಮಂಜೇಶ್ವರ ತಾಲೂಕು ಕಚೇರಿ ಮಂಜೇಶ್ವರದಲ್ಲಿಯೇ ಆರಂಭಿಸಲಾಗುವುದು - ಸಿ.ಪಿ.ಐ.
ಜೂನ್ 23, 2024
0
ಮಂಜೇಶ್ವರ ತಾಲೂಕು ಕಚೇರಿ ಮಂಜೇಶ್ವರದಲ್ಲಿಯೇ ಆರಂಭಿಸಲಾಗುವುದು - ಸಿ.ಪಿ.ಐ.
ಮಂಜೇಶ್ವರ: ಕೇರಳ ಸರಕಾರವು 2013 ರಲ್ಲಿ ಕಾಸರಗೋಡು ತಾಲೂಕನ್ನು ವಿಭಜಿಸಿ ಮಂಜೇಶ್ವರ ತಾಲೂಕು ರೂಪೀಕರಿಸಿತು. ಮಂಜೇಶ್ವರ ತಾಲೂಕಿನ ಕೇಂದ್ರವನ್ನು ಮೊದಲಿಗೆ ಮಂಜೇಶ್ವರವೆಂದು ಆದೇಶ ಹೊರಡಿಸಿದರೂ ಎರಡು ತಿಂಗಳ ಒಳಗಾಗಿ ತಾಲೂಕು ಕೇಂದ್ರವನ್ನು ಮಂಜೇಶ್ವರದಿಂದ ಉಪ್ಪಳ ಎಂದು ತಿದ್ದುಪಡಿ ಮಾಡಿ ಹೊಸ ಆದೇಶ ಹೊರಡಿಸಿ ಮಂಗಲ್ಪಾಡಿ ಪಂಚಾಯತಿನ ಉಪ್ಪಳದಲ್ಲಿರುವ ಖಾಸಗಿ ಕಟ್ಟಡದ ಮೂರನೇ ಮಹಡಿಯಲ್ಲಿ ಆರಂಭಿಸಲಾಯಿತು. ವೃದ್ಧರಿಗೆ, ಮಹಿಳೆಯರಿಗೆ, ರೋಗಿಗಳಿಗೆ, ಗಂಟುನೋವಿನಿಂದ ಕಷ್ಟ ಪಡುವ ಜನ ಸಾಮಾನ್ಯರಿಗೆ ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ತಾಲೂಕು ಕಚೇರಿಯನ್ನು ಸಮೀಪಿಸಲು ಕಷ್ಟ ಸಾಧ್ಯವೆಂಧರಿತು ಅದನ್ನು ಅನುಕೂಲಕರವಾದ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬ ಬೇಡಿಕೆ ದಿನದಿಂದ ದಿನಕ್ಕೆ ಬಲವಾಗ ತೊಡಗಿತು. ರಾಷ್ಟೀಯ ಹೆದ್ದಾರಿ ಬಳಿ, ಬಂಗ್ರ ಮಂಜೇಶ್ವರ ಗ್ರಾಮದ ಸರಕಾರಿ ಪುರಂಬೋಕು ಸ್ಥಳ ಸರ್ವೇ ನಂಬ್ರ 94/4 ರಲ್ಲಿ 2 ಎಕ್ರೆ 14 ಸೆಂಟ್ಸ್ ಭೂಮಿ ತಾಲೂಕು ಕಚೇರಿ ಮತ್ತು ಮಿನಿ ಸಿವಿಲ್ ಸ್ಟೇಷನ್ ನಿರ್ಮಾಣಕ್ಕೆ ಸೂಕ್ತ ಭೂಮಿಯೆಂದು, ಮಂಜೇಶ್ವರ, ವರ್ಕಾಡಿ, ಮೀಂಜ, ಮಂಗಲ್ಪಾಡಿ, ಪೈವಳಿಕೆ, ಪುತ್ತಿಗೆ ಮೊದಲಾದ ಪಂಚಾಯತಿನ ಎಲ್ಲರಿಗೂ ಸುಲಭದಲ್ಲಿ ವ್ಯವಹರಿಸಬಹುದಾದ ಹೊಸಂಗಡಿ ಪರಿಸರದ ಈ ಸ್ಥಳದಲ್ಲಿ ತಾಲೂಕು ಕಚೇರಿ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಜೇಶ್ವರದ ಸಿಪಿಐ ಪಕ್ಷದ ನಿಯೋಗ ಕೇರಳ ಮುಖ್ಯಮಂತ್ರಿ, ಕಂದಾಯ ಸಚಿವರು ಹಾಗೂ ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ನಿಯೋಗದಲ್ಲಿ ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್, ವರ್ಕಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಲೋಕಲ್ ಕಾರ್ಯದರ್ಶಿ ಸಿದ್ದಿಕ್ ಪಾಡಿ, ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ಮೊದಲಾದವರಿದ್ದರು.
ತಿರುವನಂತಪುರದಲ್ಲಿ ಈ ನಿಯೋಗ ಮುಖ್ಯಮಂತ್ರಿ, ಕಂದಾಯ ಸಚಿವರು, ಹಾಗೂ ಹಣಕಾಸು ಸಚಿವರನ್ನು ಭೇಟಿಯಾಗಲು ಮಾಜಿ ಕಂದಾಯ ಸಚಿವರೂ, ಹಾಲಿ ಶಾಸಕರೂ ಹಾಗೂ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಇ. ಚಂದ್ರಶೇಖರನ್ ಮತ್ತು ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್ ಸಹಕರಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಮಂಜೇಶ್ವರ ತಾಲೂಕನ್ನು ಜನ ಸಾಮಾನ್ಯರಿಗೆ ಅನುಕೂಲಕ್ಕಾಗಿ ಮಂಜೇಶ್ವರದಲ್ಲಿಯೇ ಆರಂಭಿಸುವುದಾಗಿ ಭರವಸೆ ನೀಡಿದರು.