ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಪೈವಳಿಕೆ ನಿವಾಸಿಗೆ 1 ಲಕ್ಷ ರೂಪಾಯಿ ವಂಚನೆ. ಮಾಜಿ ಡಿ.ವೈ,ಎಫ್, ಐ ನೇತಾರೆ ವಿರುದ್ಧ ಸಂತ್ರಸ್ತನಿಂದ ಮಂಜೇಶ್ವರ ಪೊಲೀಸರಿಗೆ ದೂರು.
ಅಕ್ಟೋಬರ್ 13, 2024
0
ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಪೈವಳಿಕೆ ನಿವಾಸಿಗೆ 1 ಲಕ್ಷ ರೂಪಾಯಿ ವಂಚನೆ. ಮಾಜಿ ಡಿ.ವೈ,ಎಫ್, ಐ ನೇತಾರೆ ವಿರುದ್ಧ ಸಂತ್ರಸ್ತನಿಂದ ಮಂಜೇಶ್ವರ ಪೊಲೀಸರಿಗೆ ದೂರು.
ಮಂಜೇಶ್ವರ: ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಜೂನಿಯರ್ ಕ್ಲರ್ಕ್ ಜಾಬ್ ಒದಗಿಸಿ ಕೊಡುವುದಾಗಿ ಭರವಸೆ ನೀಡಿ, ಪೈವಳಿಕೆ ನಿವಾಸಿಯಾದ ಯುವಕನಿಂದ ಒಂದು ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಇಂದು ಅಪರಾಹ್ನ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೈವಳಿಕೆ ಕಾಡೂರು ಹೌಸ್ ನಿವಾಸಿ, ಪೈವಳಿಕೆಯಲ್ಲಿ ವ್ಯಾಪಾರಿಯಾಗಿರುವ ಮಾರಪ್ಪ ಶೆಟ್ಟಿ - ದಿ. ಕುಸುಮ ದಂಪತಿಗಳ ಪುತ್ರ ಮೋಕ್ಷಿತ್ ಶೆಟ್ಟಿ (28) ಎಂಬ ಸಂತ್ರಸ್ಥನಿಗೆ ವಂಚನೆ ಉಂಟಾಗಿದೆ. ಈತ ಇಂದು ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾನೆ. ಮೊಕ್ಷಿತ್ ಶೆಟ್ಟಿ ಪೈವಳಿಕೆ ಕಾಡೂರು ನಿವಾಸಿಯಾಗಿದ್ದು, ಪ್ಲಸ್ ಟು ಕಲಿತ ಬಳಿಕ ಕಳೆದ 10 ವರ್ಷಗಳಿಂದ ಮೀಂಜ ಗ್ರಾಮ ಪಂಚಾಯತ್ ಗೊಳಪಟ್ಟ ಮಜಿಬೈಲ್ ಕಂಗುಮೆಯಲ್ಲಿರುವ ತನ್ನ ಅತ್ತೆ ಮನೆಯಲ್ಲಿ ವಾಸಿಸುತ್ತಿದ್ದು, ಕುಂಜತ್ತೂರಿನ ಮೋಟಾರ್ ವೈನ್ಡಿಂಗ್ ಶಾಪ್ ನಲ್ಲಿ ವೃತ್ತಿ ಮಾಡುತ್ತಿದ್ದನು. ತನ್ನದೇ ಪಕ್ಷದಲ್ಲಿ ಹೆಸರುವಾಸಿಯಾಗಿದ್ದ ಸಚಿತಾ ರೈ ಯನ್ನು ಫೆಸ್ ಬುಕ್ ಮೂಲಕ ಪರಿಚಯಗೊಂಡಿದ್ದನು. ಕಳೆದ ವರ್ಷ ಅಕ್ಟೋಬರ್ 6 ಕ್ಕೆ ವಾಟ್ಸಾಪ್ ಮೂಲಕ ಮೆಸೆಜ್ ಮಾಡಿದ ಸಚಿತಾ ರೈ, ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಜೂನಿಯರ್ ಕ್ಲರ್ಕ್ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಳು. ಇದಕ್ಕಾಗಿ 1 ಲಕ್ಷ ರೂಪಾಯಿ ನೀಡಬೇಕು. ಮೊದಲಿಗೆ 50,000 ರೂಪಾಯಿ ಮುಂಗಡವಾಗಿ ನೀಡಬೇಕು. ಕೆಲಸ ಸಿಕ್ಕಿ, ಸಂಬಳ ಬಂದ ಬಳಿಕ ಉಳಿದ 50,000 ನೀಡುವಂತೆ ತಿಳಿಸಿದ್ದಳು. ಅಲ್ಲದೇ ವಿದ್ಯಾಭ್ಯಾಸ ಸೇರಿದಂತೆ ಇತರ ದಾಖಲೆಗಳನ್ನು ಕೂಡಾ ನೀಡಬೇಕೆಂದು ತಿಳಿಸಿದ್ದಳು. ಇವಳ ಮಾತನ್ನು ನಂಬಿದ ಮೋಕ್ಷಿತ್ ಶೆಟ್ಟಿ ಕಳೆದ ವರ್ಷ ಅಕ್ಟೋಬರ್ 17 ಕ್ಕೆ ಗೂಗಲ್ ಪೇ ಮೂಲಕ 50,000 ನೀಡಿದ್ದನು. ಬಳಿಕ ವಾಟ್ಸಾಪ್ ನಲ್ಲಿ ಎಲ್ಲಾ ದಾಖಲೆಗಳನ್ನು ಕಳುಹಿಸಿದ್ದನು. ಒಂದು ತಿಂಗಳಿನಿಂದ ಉದ್ಯೋಗ ನಿರೀಕ್ಷೆಯಲ್ಲಿದ್ದ ಮೋಕ್ಷಿತ್ ನಿಗೆ, ಸಚಿತಾ ರೈ ವಾಟ್ಸಾಪ್ ಸಂದೇಶದಲ್ಲಿ ಪುನಃ 50,000 ನೀಡಬೇಕು, ಇಲ್ಲದಿದ್ದರೆ ಆ ಉದ್ಯೋಗ ದೊರಕುವುದಿಲ್ಲ ಎಂದು ಹೇಳಿದ್ದಳು. ಅಲ್ಲದೆ ಪದೇ ಪದೇ ಹಣ ಕಳುಹಿಸುವಂತೆ ತಿಳಿಸುತ್ತಿದ್ದಳು. ದಕ್ಕಿದ್ದ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ಧ ಮೋಕ್ಷಿತ್ ಶೆಟ್ಟಿ ತನ್ನ ಸ್ನೇಹಿತರಿಂದ ಸಾಲ ಮಾಡಿ 50,000 ಮೊತ್ತವನ್ನು ಒಟ್ಟು ಗೂಡಿಸಿ ನವೆಂಬರ್ 28 ಕ್ಕೆ ಮೊತ್ತವನ್ನು ಸಚಿತ ರೈಯ ಗೂಗಲ್ ಪೇ ಗೆ ಕಳುಹಿಸಿದ್ಧನು. ಕೂಡಲೇ ಕರೆ ಮಾಡಿದ ಸಚಿತ ರೈ ಜನವರಿ ಒಳಗಡೆ ಕೆಲಸ ಸಿಗುತ್ತೆ ಎಂಬುದಾಗಿ ತಿಳಿಸಿದ್ದಾಳೆ. ಸರಕಾರಿ ಉದ್ಯೋಗ ಸಿಗುವ ಸಂತಸದಲ್ಲಿ ಮೋಕ್ಷಿತ್ ಶೆಟ್ಟಿ ಎಂದಿನಂತೆ ತನ್ನ ವೈಂಡಿಗ್ ವೃತ್ತಿಯಲ್ಲಿ ತೊಡಗಿದ್ದ. ಜನವರಿ ಕಳೆದರೂ ಉದ್ಯೋಗದ ಸುದ್ದಿ ಇಲ್ಲದ ಕಾರಣ 2024 ಏಪ್ರಿಲ್ ತಿಂಗಳಲ್ಲಿ ಸಚಿತ ರೈಗೆ ಕರೆ ಮಾಡಿದ ಮೋಕ್ಷಿತ್ ಶೆಟ್ಟಿಗೆ ಮೇ/ಜೂನ್ ತಿಂಗಳಲ್ಲಿ ಕೆಲಸ ಆಗುತ್ತೆ ಎಂಬುದಾಗಿ ಮತ್ತೊಮ್ಮೆ ಭರವಸೆ ನೀಡಿದ್ದಳು. ಜೂನ್, ಜುಲೈ ಆಗಸ್ಟ್ ಆದರೂ ಯಾವುದೇ ಮಾಹಿತಿ ಲಭಿಸದ ಕಾರಣ ಮೋಕ್ಷಿತ್ ಶೆಟ್ಟಿ ಮತ್ತೆ ಸಚಿತ ರೈಗೆ ಫೋನಾಯಿಸಿ ವಿಚಾರಿಸಿದಾಗ ಸೆಪ್ಟೆಂಬರ್ /ಅಕ್ಟೋಬರ್ ಒಳಗಡೆ ಸಿಕ್ಕಿಯೇ ಸಿಗುತ್ತೆ ಉಡುಪಿಯ ಜನ ಮಾಡಿಕೊಡುವುದಾಗಿ ಪೂರ್ಣ ಭರವಸೆ ನೀಡಿದ್ದಳು. ಇವಳ ಮಾತನ್ನು ನಂಬಿ ಸುಮ್ಮನೆ ಇದ್ದ ಮೋಕ್ಷಿತ್ ಗೆ ಕಳೆದ ಎರಡು ವಾರಗಳಿಂದ ಮಾಧ್ಯಮಗಳಲ್ಲಿ ಸಚಿತ ರೈಯ ವಿರುದ್ಧ ಬರುವ ವಂಚನೆಯ ಪ್ರಕರಣಗಳು ಬಯಲಾಗುತ್ತಿದ್ದಂತೆ ತಾನು ಮೋಸ ಹೋದನೆಂದು ಅರಿವಾಗತೊಡಗಿದೆ. ಕೂಡಲೇ ಸಚಿತ ರೈಗೆ ಕಾಲ್ ಕರೆ ಮಾಡಿದರೂ, ಕಾಲ್ ರಿಸಿವ್ ಮಾಡದ ಕಾರಣ, ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದರೂ ಯಾವುದೇ ಆಸ್ಪದ ನೀಡದ ಕಾರಣ ಇದೀಗ ಮಂಜೇಶ್ವರ ಪೊಲೀಸರಿಗೆ ಮೋಕ್ಷಿತ್ ಶೆಟ್ಟಿ ದೂರು ನೀಡಿದ್ದಾರೆ. ಇದೀಗ ಸಚಿತ ರೈ ವಿರುದ್ಧ ಕುಂಬಳೆ, ಬದಿಯಡ್ಕ ಹಾಗೂ ದಕ್ಷಿಣ ಕನ್ನಡದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೂರು ಮಂದಿ ಸಂತ್ರಸ್ತರಿಂದ ಪ್ರತ್ಯೇಕ ಪ್ರತ್ಯೇಕ ವಂಚನೆಯ ದೂರು ದಾಖಲಾಗಿದ್ದು, ಇದೀಗ ಇಂದು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಸಚಿತಾ ರೈ ವಿರುದ್ಧ ಮೋಕ್ಷಿತ್ ಶೆಟ್ಟಿಯ ದೂರು ದಾಖಲಾಗುವುದರೊಂದಿಗೆ ಸಚಿತ ರೈ ವಿರುದ್ಧ 4 ವಂಚನೆಯ ಆರೋಪಗಳು ಸಾಭಿತಾಗಿದೆ.