ಮಂಗಳೂರು ದಸರಾ ಇಂದು ಸಂಪನ್ನ. ಲಕ್ಷಾನುಗಟ್ಟಲೇ ಜನರಲ್ಲಿ ಮನಸೂರೆಗೊಂಡ ಮಂಗಳೂರು ದಸರಾದ ನವದುರ್ಗೆಯರು ಹಾಗೂ ಶಾರದಾ ಮಾತೆಯ ವಿಗ್ರಹ ನಿರ್ಮಾಣದ ಅದ್ಭುತ ಕಲೆಗಾರ ಕುಬೇರ ಶಿವಮೊಗ್ಗ ತಂಡ.
ಅಕ್ಟೋಬರ್ 13, 2024
0
ಮಂಗಳೂರು ದಸರಾ ಇಂದು ಸಂಪನ್ನ. ಲಕ್ಷಾನುಗಟ್ಟಲೇ ಜನರಲ್ಲಿ ಮನಸೂರೆಗೊಂಡ ಮಂಗಳೂರು ದಸರಾದ ನವದುರ್ಗೆಯರು ಹಾಗೂ ಶಾರದಾ ಮಾತೆಯ ವಿಗ್ರಹ ನಿರ್ಮಾಣದ ಅದ್ಭುತ ಕಲೆಗಾರ
ಕುಬೇರ ಶಿವಮೊಗ್ಗ ತಂಡ.
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ "ಮಂಗಳೂರು ದಸರಾ" ಸಂಭ್ರಮ ಇಂದು ಸಂಜೆ ಸಂಪನ್ನಗೊಳ್ಳಲಿದೆ. ಸಂಜೆ 6 ಕ್ಕೆ ಅಲಂಕೃತಗೊಂಡ ನವದುರ್ಗೆಯರು, ಮಹಾಗಣಪತಿ, ಹಾಗೂ ವಿಶೇಷವಾದ ಅಲಂಕಾರದಲ್ಲಿ ಶೋಭಿತಗೊಳ್ಳುವ ಶ್ರೀ ಶಾರದಾಮಾತೆಯನ್ನು ವಿಶೇಷ ರಥದಲ್ಲಿ ಕುಳ್ಳಿರಿಸಿ, ಶೋಭಾಯಾತ್ರೆ ಆರಂಭಗೊಳ್ಳಲಿದೆ. ಈ ವೇಳೆ ಬಣ್ಣದ ಮುತ್ತು ಕೊಡೆಗಳು, ವಿವಿಧ ಕಲಾಪ್ರಕಾರಗಳು, ಕೇರಳದ ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್, ವಿವಿಧ ತಂಡಗಳ ಹುಲಿವೇಷ, ಸಂಘ ಸಂಸ್ಥೆಗಳ ದೃಶ್ಯ ರೂಪಕಗಳು, ಶೋಭಾಯಾತ್ರೆಗೆ ಇನ್ನಷ್ಟು ಮೆರುಗು ನೀಡಲಿವೆ. ಪ್ರಧಾನ ರಸ್ತೆಯಲ್ಲಿ ಶೋಭಾಯಾತ್ರೆ ಸಾಗಿ ನಾಳೆ ಬೆಳಗ್ಗೆ ಕ್ಷೇತ್ರದ ಪುಣ್ಯ ಕೆರೆಯಲ್ಲಿ ವಿಗ್ರಹಗಳ ಜಲಸ್ಥಂಭನಗೊಳ್ಳುವ ಮೂಲಕ ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ. ವೈಭವದ ಮಂಗಳೂರು ದಸರಾ ಶೋಭಾಯಾತ್ರೆ ವೀಕ್ಷಣೆಗೆ ಈ ಬಾರಿ ಲಕ್ಷಗಟ್ಟಲೇ ಜನ ಸಾಗರ ಹರಿದು ಬರುವ ಲಕ್ಷಣವಿದೆ. ಕಾಸರಗೋಡು, ಉಡುಪಿ, ಪುತ್ತೂರು ಸೇರಿದಂತೆ ವಿವಿಧ ಕಡೆಗಳ ದೇವಿ ಆರಾಧನಾ ಕ್ಷೇತ್ರಗಳಲ್ಲಿ ನಿನ್ನೆಯೇ ನವರಾತ್ರಿ ಉತ್ಸವಗಳು ಸಂಪನ್ನಗೊಂಡಿರುತ್ತದೆ. ಆದ್ದರಿಂದ ಹೆಚ್ಚಿನ ಭಕ್ತರ ಆಗಮನ ನಿರೀಕ್ಷೆ ಇದೆ. ಮಂಗಳೂರು ಕುದ್ರೋಳಿ ದಸರಾಕ್ಕೆ ಮೆರಗು ನೀಡುವಲ್ಲಿ ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾಮಾತೆ ಪ್ರಧಾನವಾಗಿದೆ. ಈ ವಿಗ್ರಹಗಳ ಮಣ್ಣಿನ ಮೂರ್ತಿಗಳಿಗೆ ಜೀವ ತುಂಬುವ ಕಲೆಗಾರರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ನೋಡಿ ಕಲಾವಿದನ ಕೈಚಳಕಕ್ಕೆ ಎಲ್ಲರೂ ಸೈ ಅನ್ನುತ್ತಾರೆ. ಆ ಕಲಾವಿದರು ಕಲೆಯ ಹಿಂದೆ ಇರುತ್ತಾರೆಯೇ ಹೊರತು ಎಲ್ಲೂ ಕಾಣಿಸಿಕೊಳ್ಳೋದಿಲ್ಲ. ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಆರಂಭದ ದಿನಗಳಲ್ಲಿ ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು. ಅದೇ ತಂಡದಲ್ಲಿ ಕಲಾವಿದನಾಗಿ ತನ್ನ 13 ವರ್ಷದ ಪ್ರಾಯದಲ್ಲೇ ಕೆಲಸ ಆರಂಭಿಸಿದ್ದ ಅದ್ಭುತ ಕಲಾವಿದ ಶಿವಮೊಗ್ಗದ ಕುಬೇರ ಹಾಗೂ ಅವರ ಬಳಗ ಕಳೆದ ನಾಲ್ಕು ವರ್ಷದಿಂದ ನವರಾತ್ರಿಯ ಎಲ್ಲಾ 12 ಮೂರ್ತಿಗಳನ್ನು ರಚಿಸುತ್ತಾರೆ. ದೇವತಾ ಸ್ವರೂಪವಾದ ಮೂರ್ತಿಗಳನ್ನು ರಚಿಸುವಾಗ ಈ ಎಲ್ಲಾ ಕಲಾವಿದರು ಶ್ರದ್ದೆ ನಿಷ್ಠೆ ಭಕ್ತಿಯ ಜೊತೆ ವೃತಾಚರಣೆ, ಜಪವನ್ನು ಮಾಡಿ ಮೂರ್ತಿಗಳನ್ನು ರಚಿಸುತ್ತಾರೆ. ಸುಮಾರು 40 ದಿನಗಳ ಕಾಲ ರಾತ್ರಿ - ಹಗಲು ಈ 12 ಮೂರ್ತಿಗಳನ್ನು 15 ಮಂದಿ ಕಲಾವಿದರು ಸೇರಿ ಮೂರ್ತಿಗಳ ರಚನೆ ಮಾಡುತ್ತಾರೆ. ಪ್ರತೀ ವರ್ಷವೂ ವಿಸರ್ಜನೆಗೊಳ್ಳುವ ಈ ಮೂರ್ತಿಗಳು ಮತ್ತೆ ಮುಂದಿನ ವರ್ಷ ಪ್ರತ್ಯಕ್ಷವಾಗಿದೆಯೇ ಅನ್ನುವಷ್ಟರ ಮಟ್ಟಿಗೆ ಅಷ್ಟೇ ಸುಂದರವಾಗಿ ಈ ಕಲಾವಿದರ ತಂಡ ಮೂರ್ತಿಗಳನ್ನು ರಚಿಸುತ್ತಾರೆ. ಮಂಗಳೂರು ಶಾರದೆಯನ್ನು ನೋಡಲೆಂದೇ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಗಮಿಸುತ್ತಿದ್ದು, ಭಕ್ತರ ಮನದಲ್ಲಿ ಶಾರದೆ ತುಂಬಿದ್ದರೆ, ಅದರ ನಿರ್ಮಾಣದ ಹಿಂದೆ ಈ ಕಲಾವಿದರ ಕೈ ಗುಣ, ಚಾಕಚಕ್ಯತತೆ ವಿಭಿನ್ನ. ಈ ಕಲಾವಿದರಿಗೊಂದು ದೊಡ್ಡ ಸೆಲ್ಯೂಟ್.
ಸುಖ್ಪಾಲ್ ಪೊಳಲಿ.
ಮಾಧ್ಯಮ ಸಂಚಾಲಕರು
ಶ್ರೀ ಕ್ಷೇತ್ರ ಕುದ್ರೋಳಿ.