ಕನ್ನಡ ಅಧ್ಯಾಪಕರ ಸಂಘದ ಪ್ರಯತ್ನದಿಂದಾಗಿ ಕನ್ನಡೇತರರ ನೇಮಕಾತಿಗೆ ಹಿನ್ನಡೆ.
ಜೂನ್ 01, 2025
0
ಕನ್ನಡ ಅಧ್ಯಾಪಕರ ಸಂಘದ ಪ್ರಯತ್ನದಿಂದಾಗಿ ಕನ್ನಡೇತರರ ನೇಮಕಾತಿಗೆ ಹಿನ್ನಡೆ.
ಕಾಸರಗೋಡು : ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಐದು ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ತೆರವಾದ ಮುಖ್ಯೋಪಾಧ್ಯಾಯ ಸ್ಥಾನಗಳಿಗೆ ಮಲಯಾಳಂ ಅಧ್ಯಾಪಕರನ್ನು ಭಡ್ತಿ ಮೂಲಕ ತುಂಬಲು ತಿರುವನಂತಪುರಂ ಡಿ.ಜಿ.ಇ. ಆದೇಶವನ್ನು ಹೊರಡಿಸಿತ್ತು. ಸೂಕ್ತ ಸಮಯದಲ್ಲಿ ಕ್ಷಿಪ್ರವಾಗಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಪದಾಧಿಕಾರಿಗಳು ಸ್ಪಂದಿಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡ ಪರಿಣಾಮವಾಗಿ ಈ ಐದು ಮಂದಿಯನ್ನು ಮಲಯಾಳಂ ಶಾಲೆಗಳಿಗೆ ಕಳುಹಿಸುವ ಹೊಸ ಆದೇಶ ಹೊರಡಿಸಲು ಸಾಧ್ಯವಾಗಿದೆ. ಕನ್ನಡಿಗರಿಗೆ ಲಭಿಸುವ ಸವಲತ್ತುಗಳನ್ನು ಕಸಿಯುವ ಪ್ರಯತ್ನವನ್ನು ಹಿಮ್ಮೆಟ್ಟಿಸುವಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಯಶಸ್ವಿಯಾಗಿದೆ.
ಬಂದಡ್ಕ, ಕುಂಜತ್ತೂರು, ಮಂಗಲ್ಪಾಡಿ ಹಾಗೂ ಮೂಡಂಬೈಲ್ ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಸ್ಥಾನ ತೆರೆವಾಗಿದ್ದು ಈ ಸಮಯದಲ್ಲಿ ಕನ್ನಡೇತರ ಮುಖ್ಯ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಲಾಗಿತ್ತು. ಈ ಶಾಲೆಗಳಿಗೆ ಈ ಹಿಂದೆ ಕನ್ನಡೇತರ ಶಿಕ್ಷಕರನ್ನು ಕನ್ನಡ ಮಾಧ್ಯಮಕ್ಕೆ ನೇಮಿಸಿದಾಗ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ಮತ್ತೆ ಮುಖ್ಯ ಶಿಕ್ಷಕರನ್ನು ನೇಮಿಸಿದಾಗ ಕೂಡಲೇ ಕಾರ್ಯ ಪ್ರವೃತ್ತರಾದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಆದೇಶವನ್ನು ಹಿಂತೆಗೆಯುವಲ್ಲಿ ಸಫಲವಾಗಿದೆ. ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಕನ್ನಡ ಅಧ್ಯಾಪಕ ಸಂಘಟನೆಯು ಧನ್ಯವಾದಗಳನ್ನು ಅರ್ಪಿಸಿದೆ.