ಯಾವುದೇ ಶೀರ್ಷಿಕೆಯಿಲ್ಲ
ಜೂನ್ 04, 2024
0
ಉಡುಪಿ: ಶಿಲ್ಪಕಲೆಯುಕ್ತ ದೇವಸ್ಥಾನಗಳಿಂದಲೇ ಭಾರತದೇಶ ಗುರುತಿಸಲ್ಪಡುತ್ತದೆ. ಅ ದೃಷ್ಟಿಯಲ್ಲಿ ಭಾರತೀಯ ಸಂಸ್ಕೃತಿ ಅಂದರೆ ಶಿಲ್ಪಕಲೆಗಳ ದೇವಸ್ಥಾನದ ಸಂಸ್ಕೃತಿಯಾಗಿದೆ ಎಂದು ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧಿಪತಿ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರ ೧೪ನೇ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವದ ಅಂಗವಾಗಿ ಪಡುಕುತ್ಯಾರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪಿ ಅಯೋಧ್ಯಾ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಮೈಸೂರು ಅವರಿಗೆ ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಗೆ ದೊಡ್ಡ ಕೊಡುಗೆ ಕೊಟ್ಟಂತಹವರು ಶಿಲ್ಪಿಗಳು. ಅಂದಿನ ಶಿಲ್ಪಿಗಳ ದೊಡ್ಡ ಕೊಡುಗೆಯಿಂದ ಅಯೋಧ್ಯೆಯಲ್ಲಿಂದು ರಾಮಮಂದಿರ ನಿರ್ಮಾಣ ಮಾಡಿ ಪೂಜೆ ಸಲ್ಲಿಸುವ ಅವಕಾಶ ದೊರಕಿತು. ಶಿಲಾಯುಗದಿಂದ ಆಧುನಿಕ ಮಾನವನವರೆಗೆ ಏನೇನೂ ಸೌಲಭ್ಯ ನಾವು ಪಡೆದುಕೊಂಡಿದ್ದೆವು. ಅದಕ್ಕೆಲ್ಲಾ ಮೂಲ ಪ್ರೇರಣೆ ಶಿಲ್ಪವೇ ಆಗಿದೆ. ಅಂತಹ ಶಿಲ್ಪಿಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿ ಕೊಡುವಂತಹ ಪ್ರಯತ್ನವನ್ನು ಹಂತಹಂತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣ್ ಯೋಗಿರಾಜ್, ಸಂತೋಷ, ಶ್ರದ್ಧೆಯಿಂದ ಮಾಡುವ ಕೆಲಸಕ್ಕೆ ಸಾಕಷ್ಟು ಅವಕಾಶಗಳು ಕೂಡಿ ಬರುತ್ತವೆ. ಯುವ ಪೀಳಿಗೆ ಸಮಯಕ್ಕೆ ಆದ್ಯತೆ ನೀಡಿ. ಮಾಡುವ ಕೆಲಸದಲ್ಲಿ ಸಂತೋಷ, ಶ್ರದ್ಧೆ, ಗುರುಹಿರಿಯರ ಆಶೀರ್ವಾದವಿರಲಿ. ನನಗೆ ಸಿಕ್ಕಂತಹ ಅವಕಾಶ ಎಲ್ಲರಿಗೂ ಸಿಗಲಿ. ಈಗಾಗಲೇ ನಮ್ಮಿಂದ ಮಾಡಿರುವ ಹಲವು ಕೆಲಸಗಳ ಬಗ್ಗೆ ಉದ್ಗರಿಸಲಾಗಿದೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಅಮರನಾಥದ ಉದ್ಭವ ಲಿಂಗದ ಮುಂದಿನ ನಂದಿ ವಿಗ್ರಹವನ್ನು ನಮ್ಮ ಕಡೆಯಿಂದ ಮಾಡಿಸಿಕೊಳ್ಳಲಾಗಿದೆ. ಈ ಒಂದು ಕೀರ್ತಿಯೂ ವಿಶ್ವಕರ್ಮ ಜನಾಂಗಕ್ಕೆ ಸೇರುತ್ತದೆ ಎಂದರು.
ಆನೆಗುಂದಿ ಶ್ರೀ, ಯುವ ಶಿಲ್ಪಿ ಪ್ರಶಸ್ತಿ ಪ್ರದಾನ : ರಥಶಿಲ್ಪಿ ಸುದರ್ಶನ ಆಚಾರ್ಯ ಉಡುಪಿ, ಚಿತ್ರ ಕಲಾವಿದ ವೈ.ಎನ್. ತಾರನಾಥ ಆಚಾರ್ಯ ಮಂಗಳೂರು ಅವರಿಗೆ ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು. ಯುವ ಶಿಲ್ಪಿಗಳಾದ ಶಿಲ್ಪಿ ಚಿದಾನಂದ ಆಚಾರ್ಯ ವಿಟ್ಲ, ಶಿಲ್ಪಿ ಕೆ.ಎಸ್. ಸುಮಂತ್ ಆಚಾರ್ಯ ಪುತ್ತೂರು, ಶಿಲ್ಪಿ ಜಯಚಂದ್ರ ಆಚಾರ್ಯ ನಾಳ, ಡಿ.ಕೆ. ಕವಿತಾ ಬೆಂಗಳೂರು, ವೈಭವ್ ಅಶೋಕ್ ಮಡಕೈಕರ್ ಕಾರವಾರ ಅವರನ್ನು ಯುವಶಿಲ್ಪಿ ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಪುಸ್ತಕ ಬಿಡುಗಡೆ, ಛಾಯಾಚಿತ್ರ ಪ್ರದರ್ಶನ : ಮೈಸೂರು ಡಾ. ಶ್ರೀಕಂಠಾಚಾರ್ ಬರೆದಿರುವ ಮೇರು ಶಿಲ್ಪಿ ಮಲ್ಲಿಂತಮ ಪುಸ್ತಕ ಬಿಡುಗಡೆ, ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಕೆ.ಎಸ್. ಶ್ರೀನಿವಾಸ್ ಬೆಂಗಳೂರು ಅವರಿಂದ ಮೇರು ಶಿಲ್ಪಿ ಮಲ್ಲಿಂತಮ ಮತ್ತು ಸರ್ವ ಸಿದ್ದಿ ಆಚಾರಿಯವರ ಪರಿಚಯಾತ್ಮಕ ಛಾಯಾಚಿತ್ರ ಪ್ರದರ್ಶನ, ವಿಶ್ವಕರ್ಮ ಚಿತ್ರಕಲಾ ಪರಿಷತ್ ಮಂಗಳೂರು ಇವರಿಂದ ಕಲಾ ಪ್ರದರ್ಶನ, ದಿವ್ಯಚಂದ್ರ ಪ್ರಕಾಶನ ಬೆಂಗಳೂರು, ಮಯ ಪ್ರಕಾಶನ ಕಮಲಪುರ ಹಂಪಿ, ಶ್ತಿರ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಇವರಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ರಥಶಿಲ್ಪಿ ಕೋಟೇಶ್ವರ ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಆಚಾರ್ಯ, ತಮಿಳುನಾಡು ಪಾರಂಪರಿಕ ದೇವಾಲಯಗಳ ಸ್ಥಪತಿ ಶಿಲ್ಪಾಚಾರ್ಯ ಯು.ಕೆ. ಉಮಾಪತಿ ಆಚಾರ್ಯ ಕುಂಭಕೋಣಂ, ಇಂಡಿಯನ್ ವಿಶ್ವಕರ್ಮ ಆಫೀಸರ್ಸ್ ಬ್ಯುಸಿನೆಸ್ ಆಂಡ್ ಪ್ರೊಫೆಶನಲ್ ಫೌಂಡೇಶನ್ನ ಗೌರವಾಧ್ಯಕ್ಷ ಕೆ.ಎಸ್. ಪ್ರಭಾಕರ್ ಬೆಂಗಳೂರು, ಅಧ್ಯಕ್ಷ ಬಿ.ಎನ್.ವಿ. ರಾಜಶೇಖರ ಹೈದರಾಬಾದ್, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಅರುಣಾಕರ ಶೆಟ್ಟಿ ಕಳತ್ತೂರು, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ದೇವರಾಜ್ ರಾವ್ ನಡಿಮನೆ, ಮಂಗಳೂರು ಎಸ್.ಕೆ.ಜಿ.ಐ ಕೋ ಆಫ್ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಭಾಗವಹಿಸಿದ್ದರು.
ಪ್ರಮುಖರಾದ ದಿನೇಶ್ ಆಚಾರ್ಯ ಪಡುಬಿದ್ರಿ, ಮಧು ಆಚಾರ್ಯ ಮೂಲ್ಕಿ ಶುಭಾಶಂಸನೆದೈರು. ಕರಾವಳಿಯ ವಿಶ್ವಕರ್ಮ ಕಾಳಿಕಾಂಬಾ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪದಾಽಕಾರಿಗಳು, ವಿಶ್ವಸ್ಥರು, ಸಂಘಟನಾ ಸಮಿತಿ, ಆಯೋಜನಾ ಸಮಿತಿ ಮುಖಂಡರು ಉಪಸ್ಥಿತರಿದ್ದರು.
ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ವಂದಿಸಿದರು. ಗೀತಾ ಚಂದ್ರ ಕಾರ್ಕಳ, ಮೌನೇಶ್ ಶರ್ಮ ಸಮ್ಮಾನ ಪತ್ರ ವಾಚಿಸಿದರು. ಕೆ. ಎಂ. ಗಂಗಾಧರ ಆಚಾರ್ಯ ಕೊಂಡೆವೂರು ನಿರೂಪಿಸಿದರು.