ಹನ್ನೊಂದನೇ ವಾರ್ಷಿಕ ಮಹೋತ್ಸವದಲ್ಲಿ ಸರ್ವ ಧರ್ಮ ಸಮನ್ವಯತೆಯ ಸಂದೇಶ ಸಾರಿದ ಹೊಸಂಗಡಿ ಇನ್ಫೆನ್ಟ್ ಜೀಸಸ್ ಚರ್ಚ್.
ಜನವರಿ 12, 2025
0
ಹನ್ನೊಂದನೇ ವಾರ್ಷಿಕ ಮಹೋತ್ಸವದಲ್ಲಿ ಸರ್ವ ಧರ್ಮ ಸಮನ್ವಯತೆಯ ಸಂದೇಶ ಸಾರಿದ ಹೊಸಂಗಡಿ ಇನ್ಫೆನ್ಟ್ ಜೀಸಸ್ ಚರ್ಚ್.
ಒಂದೇ ವೇದಿಕೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯ ಬಾಂಧವರು ಆಸನ ಸ್ವೀಕರಿಸಿ "ಧಾರ್ಮಿಕ ಸೌಹಾರ್ದ ಸಮ್ಮೇಳನ".
ಮಂಜೇಶ್ವರ: ನಮ್ಮ ದೇಶದಲ್ಲಿ ಎಲ್ಲ ಜಾತಿ ಜನಾಂಗದವರು ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಭಾತೃತ್ವತೆ, ಮಾನವೀಯತೆ, ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಾರೆ. ಇದುವೇ ನಮ್ಮ ದೇಶದ ಬೃಹತ್ ಶಕ್ತಿ’ ಎಂದು ಮಂಜೇಶ್ವರ
ಶಾಸಕರಾದ ಎ.ಕೆ.ಎಂ ಅಶ್ರಫ್ ನುಡಿದರು. ಅವರು ಹೊಸಂಗಡಿ ಬಳಿಯ ದುರ್ಗಿಪಳ್ಳದಲ್ಲಿರುವ ಬಾಲ ಏಸುವಿನ ದೇವಾಲಯ (ಇನ್ಫೆನ್ಟ್ ಜೀಸಸ್ ಚರ್ಚ್) ದಲ್ಲಿ ನಡೆಯುತ್ತಿರುವ 11 ನೇ ವರ್ಷದ ವಾರ್ಷಿಕ ಹಬ್ಬದಂಗವಾಗಿ ನಡೆದ ಧಾರ್ಮಿಕ ಸೌಹಾರ್ದ ಸಮ್ಮೇಳನವನ್ನು ಉದ್ಘಾಟಿಸಿ, ಮಾತನಾಡಿದರು. ಸೌಹಾರ್ದತೆಯಿಂದೊಡಗೂಡಿದ ಹೊಂದಾಣಿಕೆ, ಸಹಬಾಳ್ವೆ ಪರಸ್ಪರ ಪ್ರೀತಿ ನಮ್ಮಲ್ಲಿದ್ದರೆ ಜೀವನದಲ್ಲಿ ಸಂತೋಷವಿರುತ್ತದೆ. ಇಂತಹ ಉದಾತ್ತ ಗುಣಗಳನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದರು. ಪುರೋಹಿತರಾದ ವೇದಮೂರ್ತಿ ಶ್ರೀ ಹರಿನಾರಾಯಣ ಮಯ್ಯ ಕುಂಬಳೆ ಆಶೀರ್ವಚನವಿತ್ತು ದೇವಾಲಯಗಳ ನಿರ್ಮಾಣದಿಂದ ದೇವರ ಸ್ಮರಣೆ, ಸಂಸ್ಕಾರಗಳು ಮೂಡಿಬರುತ್ತದೆ. ಜತೆಗೆ ನಿತ್ಯ ದೇವಾಲಗಳಿಗೆ ಬಂದು ಪ್ರಾರ್ಥನೆ ಸಲ್ಲಿಸುವುದರ ಮೂಲಕ ಪಾವಿತ್ರ್ಯತೆ ಪಡೆಯಬಹುದು ಎಂದರು.
ಸಂಸ್ಕಾರಗಳ ಅಳವಡಿಕೆ, ಆಚಾರ - ವಿಚಾರಗಳಿಂದ ಮಾನವನ ಭವಿಷ್ಯ ಉತ್ತಮಗೊಳ್ಳಲು, ಸೃಜನಶೀಲತೆ, ಏಕತೆ, ಒಗ್ಗೂಡುವಿಕೆ, ಸರ್ವತೋಮುಖ ಬೆಳವಣಿಗೆ, ತಾಳ್ಮೆ, ಸಹನೆ, ಶಾಂತಿ ಜೀವನಕ್ಕೆ ಪಾಠವಾಗುವುದಕ್ಕೆ ದೇವಾಲಯಗಳು ಸಹಕಾರಿಯಾಗುವುದು ಎಂದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಂಗಡಿಮೊಗರು ಜುಮಾ ಮಸ್ಜಿದ್ ನ ಚೀಫ್ ಇಮಾಂ ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ ಮಾತನಾಡಿ
ನಾವು ಗತ ಕಾಲದ ಪ್ರೀತಿ, ಸ್ನೇಹವನ್ನು ಮತ್ತೆ ಮರಳಿ ತರಬೇಕು, ಯಾವುದೇ ಬೇದಭಾವವಿಲ್ಲದೆ ನಾವು ಸಮಾಜದಲ್ಲಿ ಒಟ್ಟಾಗಿರಬೇಕು. ಧರ್ಮ- ಧರ್ಮಗಳ ನಡುವೆ ಪ್ರೀತಿ ಬೆಳೆಸುವ ಕೆಲಸ ಅಗತ್ಯವಾಗಿ ನಡೆಯಬೇಕಿದೆ.ಧರ್ಮ ಮುನ್ನಡೆಸುವ ಮಂದಿ ಸಮಾಜದಲ್ಲಿ ಕೊಂಡಿಗಳಂತೆ ಕೆಲಸ ಮಾಡಬೇಕು, ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಹೇಳಿದರು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ
ಶ್ರೀಮತಿ ಸುಂದರಿ ಆರ್. ಶೆಟ್ಟಿ, ಮಾತನಾಡಿ ಎಲ್ಲಾ ಧರ್ಮದ ಸಮಾಜ ಬಾಂಧವರು ಐಕ್ಯತೆಯಿಂದ ಬಾಳಿ ಬದುಕಬೇಕು. ವಿವಿಧತೆಯಲ್ಲಿ ಏಕತೆಯೇ ಭಾರತದ ಕಿರೀಟವಾಗಿದೆ. ನಾವು ಯಾವ ಧರ್ಮದವರನ್ನೂ ತೆಗಳಬಾರದು, ನಿಂದಿಸಬಾರದು. ನಾನೇ ಶ್ರೇಷ್ಠ ಎಂಬ ಅಹಂಭಾವನ್ನು ಬಿಟ್ಟು ಸಮಾಜದಲ್ಲಿ ಎಲ್ಲರೊಂದಿಗೂ ಸ್ನೇಹದಿಂದ ಬಾಳ್ವೆ ನಡೆಸಬೇಕು ಎಂದು ನುಡಿದರು. ಸಾಮಾಜಿಕ ಕಾರ್ಯಕರ್ತರಾದ ಇದ್ರೀಸ್ ಮಂಜೇಶ್ವರ ಮಾತನಾಡಿ ಸಮಾಜದಲ್ಲಿ ಹಿಂದೂಗಳು, ಮುಸ್ಲಿಂ, ಕ್ರೈಸ್ತರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕಿದೆ. ನಾವು ಕಷ್ಟ ಬಂದಾಗ ನೆರವಾಗುವವನೇ ನಮ್ಮ ಬಂಧುವಾಗಿದ್ದಾನೆ, ನಾವು ಇಗೋ ಬಿಟ್ಟುಬಿಡಬೇಕು. ಇಗೋ ಕಾರಣಕ್ಕೆ ಕೆಲವರು ಧರ್ಮದ ವಿಚಾರದಲ್ಲಿ ವ್ಯರ್ಥ ಸಂಘರ್ಷವನ್ನು ಮಾಡುತ್ತಿದ್ದಾರೆ ಇದರಿಂದ ಸಮಾಜದ ನೆಮ್ಮದಿ ಹಾಳಾಗುತ್ತದೆ ಎಂದು ಹೇಳಿದರು. ಚರ್ಚ್ ನ ಧರ್ಮಗುರುಗಳಾದ ರೆವ. ಫಾ. ಲೂಯಿ ಮರಿಯಾದಾಸ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಸರ್ವ ಧರ್ಮದ ಸಂಗಮ ಚರ್ಚ್ ನ ಹನ್ನೊಂದನೇ ವರ್ಷದಲ್ಲಿ ಯಶಸ್ವಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಸರ್ವ ಧರ್ಮದ ಎಲ್ಲಾ ಕಾರ್ಯಕ್ಕೂ ನಮ್ಮ ಚರ್ಚಿನಿಂದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಮಂಜೇಶ್ವರ ಸ್ನೇಹಾಲಯದ ರೂವಾರಿ ಬ್ರದರ್ ಜೋಸೆಫ್ ಕ್ರಾಸ್ತಾ, ಸಾಮಾಜಿಕ ಕಾರ್ಯಕರ್ತ ಜೈನುಲ್ ಅಬೀದ್ ಮಂಜೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್ವ ಧರ್ಮ ಸಮನ್ವಯತೆಯ ಸಂದೇಶ ಸಾರುವ ರೀತಿಯಲ್ಲಿ ಈ ಸಮಾರಂಭ ಏರ್ಪಟ್ಟಿತ್ತು. ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾಯದ ಬಾಂಧವರು ವೇದಿಕೆಯಲ್ಲಿ ಆಸನ ಅಲಂಕರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಇದ್ರಿಸ್ ಮಂಜೇಶ್ವರರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಮುಖಾಂತರ ಧಾರ್ಮಿಕ ಸೌಹಾರ್ದ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಿದ ಚರ್ಚಿನ ಫಾದರ್ ರಿಗೆ ಶಾಲು ಹೊದಿಸಿ ಗೌರವಿಸಿದರು. ಕಾರ್ಯಕ್ರಮ ಸಂಯೋಜಕರಾದ ವಿಕೆ ಜೋಯ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕ್ಲಿಂಟ್ ಸ್ನೇಹಾಲಯ ಮಂಜೇಶ್ವರ ನಿರೂಪಿಸಿ, ಚರ್ಚ್ ನ ಕೋರ್ಡಿನೆಟರ್ ಥೋಮಸ್ ಪನಕಲ್ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜಾದೂಗಾರ ಸುಧೀರ್ ಮಾಡಕತ್ತ ಮತ್ತು ಬಳಗದವರಿಂದ, ಸುಮಾರು 25 ಕಲಾವಿದರನ್ನೊಳಗೊಂಡ "ಮ್ಯಾಜಿಕ್ ಸಿನ್ಸಿಲ" ನೃತ್ಯ ವೈಭವದ ಮ್ಯಾಜಿಕ್ ಶೋ ಪ್ರದರ್ಶನಗೊಂಡಿತು.
ಚಿತ್ರಗಳು: ದೀಪಕ್ ರಾಜ್ ಉಪ್ಪಳ.